ಬೆಳ್ಳಗಿರುವುದೆಲ್ಲಾ ಹಾಲಲ್ಲ

ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ ಗಾದೆಯು ನಮ್ಮ ಹಿರಿಯರ ಜೀವನದ ಅನುಭವದ ನುಡಿಮುತ್ತುಗಳಾಗಿದೆ. ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬುವುದು ಒಂದು ಪ್ರಸಿದ್ಧವಾದ ಗಾದೆ ಮಾತಾಗಿದೆ

ಹಾಲು ಎಂಬುದು ಅಮೃತಕ್ಕೆ ಸಮಾನವಾದ ಪೌಷ್ಟಿಕ ಆಹಾರವಾಗಿದೆ.ಹಾಲು ಸಂಪೂರ್ಣ ಆಹಾರವಾಗಿದ್ದು, ಇದರಲ್ಲಿ ಕಂಡುಬರುವ ಜೀವಸತ್ವಗಳು ಮತ್ತು ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.ಹಾಲಿನ ಬಣ್ಣ ಬಿಳಿ. ಆದರೆ ಬಿಳಿ ಬಣ್ಣದ ಪದಾರ್ಥಗಳೆಲ್ಲ ಹಾಲಲ್ಲ,ಸುಣ್ಣದ ತಿಳಿ ನೀರಾಗಲೀ ಕಳ್ಳಿಯ ಹಾಲಾಗಲೀ ಬಿಳಿ ಬಣ್ಣವನ್ನೇ ಹೊಂದಿದೆ.ಆದರೆ ಇವುಗಳ ಗುಣ ಧರ್ಮಗಳೇ ಬೇರೆ ಬೇರೆಯಾಗಿದೆ.ಇವುಗಳನ್ನು ಹಾಲೆಂದು ಕುಡಿದರೆ ಜೀವಕ್ಕೆ ಮಾರಕ.ಆದ್ದರಿಂದ ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂದು ನಮ್ಮ ಹಿರಿಯರು ಹೇಳಿದಂತೆ ಬಣ್ಣವೊಂದೇ ಇದ್ದರೂ ಅವುಗಳ ನಡುವಿನ ವ್ಯತ್ಯಾಸಗಳನ್ನು ಕಂಡುಕೊಳ್ಳಬೇಕು.ಸತ್ಯಾಸತ್ಯತೆಗಳನ್ನು ಪರಿಶೀಲಿಸಬೇಕು ಎಂಬುದು ಈ ಗಾದೆ ಮಾತಿನ ತಾತ್ಪರ್ಯವಾಗಿದೆ.

ಜೀವನದಲ್ಲಿ ಅನೇಕ ವ್ಯಕ್ತಿಗಳನ್ನು ನಾವು ಭೇಟಿಯಾಗುತ್ತೇವೆ.ವ್ಯಕ್ತಿಯ ಹೊರಬಣ್ಣವನ್ನು ನೋಡಿ ನಾವು ಅವರನ್ನು ಒಳ್ಳೆಯವರು ಎಂದು  ನಂಬಿದರೆ ಮೋಸ ಹೋಗಬಹುದು ಎಂಬುದು ಈ ಗಾದೆಯ ಅರ್ಥವಾಗಿದೆ.ಬಣ್ಣದ ತಳುಕು ಬಳುಕಿಗೆ ಮರುಳಾಗದೆ ಅವರ ಗುಣ ವರ್ತನೆ ಸ್ವಭಾವ ವ್ಯಕ್ತಿತ್ವ ಎಲ್ಲವನ್ನು ತಿಳಿದುಕೊಂಡು ಮುನ್ನಡೆಯಬೇಕು.ಚಂದದ ಮಾತು ,ಸ್ನೇಹದ ಮುಖವಾಡ ,ಪ್ರೀತಿಯ ನಾಟಕ ಇವುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.ತಮ್ಮ ಸ್ವಾರ್ಥ ಸಾಧನೆಗಾಗಿ ಒಳ್ಳೆಯವರೆಂದು ನಾಟಕವಾಡುವ   ತುಂಬಾ ಜನರಿದ್ದಾರೆ .ಅದೆಷ್ಟೋ ಯುವಕ ಯುವತಿಯರು ಬೆಳ್ಳಗಿರುವುದೆಲ್ಲಾ ಹಾಲೆಂದು ನಂಬಿ ಪ್ರೀತಿಯ ನಾಟಕದ ಬಲೆಗೆ ಬಿದ್ದು ತಮ್ಮ ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ.ಇನ್ನು ಕೆಲವರು ಜನರನ್ನು ಅರ್ಥಮಾಡಿಕೊಳ್ಳದೆ ಒಳ್ಳೆಯವರೆಂದು ನಂಬಿ ಹಣ ಒಡವೆ ಆಸ್ತಿಯನ್ನು ಕಳೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಯಾರನ್ನೇ ಆಗಲಿ ಪೂರ್ತಿಯಾಗಿ ನಂಬುವ ಮೊದಲು ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವುದಕ್ಕಿಂತ ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬುದನ್ನು ಮೊದಲೇ ಅರಿತರೆ ಒಳ್ಳೆಯದು.ಬಣ್ಣಕ್ಕಿಂತ ಗುಣ ಮುಖ್ಯ ಎಂಬುದನ್ನು ನಾವು ಅರ್ಥೈಸಬೇಕು ಎಂಬುದು ಈ ಗಾದೆ ಮಾತಿನ ಸಾರಾಂಶವಾಗಿದೆ


Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು