ಗಾದೆಗಳು ವೇದಗಳಿಗೆ ಸಮಾನ ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ.ಗಾದೆಗಳು ನಮ್ಮ ಹಿರಿಯರ ಜೀವನದ ಅನುಭವದ ನುಡಿಮುತ್ತುಗಳಾಗಿವೆ.' ಮಾತೇ ಮುತ್ತು, ಮಾತೆ ಮೃತ್ಯು ' ಒಂದು ಪ್ರಸಿದ್ಧವಾದ ಗಾದೆ ಮಾತಾಗಿದೆ.ಈ ಗಾದೆಯು ಮಾತಿನ ಮಹತ್ವವನ್ನು ತಿಳಿಯಪಡಿಸುತ್ತದೆ.ಮಾತಿನಿಂದ ಒಳ್ಳೆಯದು ಹಾಗೂ ಕೆಟ್ಟದು ಎರಡು ಸಂಭವಿಸುತ್ತದೆ ಎಂಬುದು ಈ ಗಾದೆಯ ಅರ್ಥವಾಗಿದೆ.
ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಾತಿಗೆ ಪ್ರಮುಖ ಸ್ಥಾನವಿದೆ.ನಾವು ಮಾತಾನಾಡುವಾಗ ನಮ್ಮ ನಾಲಿಗೆಯ ಮೇಲೆ ಹಿಡಿತ ಇರಬೇಕು. ಏಕೆಂದರೆ ಎಚ್ಚರ ತಪ್ಪಿ ಆಡುವ ಮಾತು ಇನ್ನೊಬ್ಬರ ಮನಸ್ಸಿಗೆ ನೋವು ತರಬಹುದು, ಕಿರಿಕಿರಿ ಉಂಟುಮಾಡಬಹುದು,ಬೇಸರ ಉಂಟು ಮಾಡಿ ಕೋಪವನ್ನೂ ತರಿಸಬಹುದು. ಕೆಲವೊಮ್ಮೆ ಸಿಟ್ಟು ಅತಿರೇಕಕ್ಕೆ ಹೋಗಿ ಹಿಡಿತ ತಪ್ಪಿದರೆ ಇಬ್ಬರ ನಡುವೆ ಜಗಳವಾಗಿ ದುರಂತಗಳು ಸಂಭವಿಸಬಹುದು. ಮಾತಿನ ಮಹತ್ವ ಬಲ್ಲ ಕೆಲವರು ತಮ್ಮಮಾತಿನಿಂದಲೇ ಇಡೀ ಜಗತ್ತನ್ನೇ ಗೆಲ್ಲುತ್ತಾರೆ. ಇನ್ನು ಕೆಲವರು ಮಾತಿನಿಂದಲೇ ಅವನತಿಯನ್ನು ಹೊಂದುತ್ತಾರೆ.ಒಳ್ಳೆಯ ಮಾತು ಸಂಬಂಧವನ್ನು ಗಟ್ಟಿ ಮಾಡಬಹುದು , ಕೆಟ್ಟ ಮಾತು ಸಂಬಂಧವನ್ನು ಬೇರ್ಪಡಿಸಿ ಹಾಳು ಮಾಡಬಹುದು.ಆದ್ದರಿಂದ ನಾವಾಡುವ ಮಾತಿನ ಮೇಲೆ ಹತೋಟಿ ಇರುವುದು ಒಳ್ಳೆಯದು.
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
ಬಸವಣ್ಣನವರ ಈ ವಚನದಲ್ಲಿ ದಿವ್ಯ ಸಂದೇಶವೇ ಅಡಗಿದೆ. ಅಂದರೆ ನಮ್ಮ ಮಾತು ಇತರರಿಗೆ ನೋವುಂಟು ಮಾಡದಂತೆ ಹಿತ-ಮಿತವಾಗಿ ಮೃದುವಾಗಿರಬೇಕು. ನಮ್ಮ ನುಡಿಗಳು ಸುಂದರವಾಗಿ, ಸರಳವಾಗಿದ್ದು ಮತ್ತೊಬ್ಬರ ಮನನೋಯಿಸದಂತಿರಬೇಕು ಎಂದಿದ್ದಾರೆ.
ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬ ನುಡಿಮುತ್ತು ಮಾತಿನ ಮಹತ್ವವನ್ನು ತಿಳಿಸುತ್ತದೆ. ನಮ್ಮ ಮಾತಿನ ಬಗ್ಗೆ ನಮಗಿರಬೇಕಾದ ವಿವೇಚನೆಯನ್ನು ಕುರಿತು ಹೇಳುತ್ತದೆ.ಮಾತಿಗೆ ಮನಸ್ಸುಗಳನ್ನು ಬೆಸೆಯುವ ಮತ್ತು ಒಡೆಯುವ ಎರಡೂ ಸಾಮರ್ಥ್ಯವಿದೆ.ಮಾತು ನಮ್ಮ ಭಾವನೆಗಳ ಪ್ರತಿಬಿಂಬವಾಗಿದೆ.ಉತ್ತಮ ಮಾತುಗಾರರು ಜೀವನದ ಹಲವು ಸಮಸ್ಯೆಗಳನ್ನು ಎದುರಿಸುವಲ್ಲಿ ಯಶಸ್ವಿಗಳಾಗುತ್ತಾರೆ.
ಊಟ ಬಲ್ಲವನಿಗೆ ರೋಗವಿಲ್ಲ;ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬ ಗಾದೆಮಾತು ಕೂಡಾ ಮಾತಿನ ಬೆಲೆಯನ್ನು ತಿಳಿಸುತ್ತದೆ ಎಲ್ಲಿ ,ಯಾವಾಗ,ಹೇಗೆ ಮಾತನಾಡಿದರೆ ಮಾತಿಗೆ ಮಹತ್ವ ಬರುತ್ತದೆ ಎಂಬುದನ್ನು ತಿಳಿಸುತ್ತದೆ.ಇಬ್ಬರು ವ್ಯಕ್ತಿಗಳು ಜಗಳವಾಡುತ್ತಿರುವಾಗ ಪ್ರಚೋದನಕಾರಿ ಮಾತನಾಡಿದರೆ ಪರಿಣಾಮ ಕ್ರೂರವಾಗಬಹುದು.ಅದೇ ಸ್ವಲ್ಪ ಸಂಯಮದಿಂದ ಮಾತನಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆತರಬಹುದು.ನಾವಾಡುವ ಮಾತು ಇತರರ ಮನಸ್ಸನ್ನು ಹಾಳುಮಾಡುವುದಲ್ಲದೆ ಕೆಲವೊಮ್ಮೆ ಕುಟುಂಬ-ಊರು-ದೇಶಗಳ ನಡುವಿನ ಹೋರಾಟಕ್ಕೆ ಕಾರಣವಾಗುತ್ತದೆ.
“ಮಾತೆಂಬ ಜ್ಯೋತಿ ಈ ಜಗತ್ತಿನಲ್ಲಿ ಬೆಳಗದೇ ಇದ್ದರೆ ಇಡೀ ಜಗತ್ತು ಅಂಧಕಾರದಲ್ಲಿ ಮುಳುಗುತ್ತಿತ್ತು”ಎಂಬ ಕವಿವಾಣಿ ನಿಜಕ್ಕೂ ಸತ್ಯ. ನಮ್ಮ ಬದುಕಿನ ದಿನನಿತ್ಯದ ಎಲ್ಲಾ ವ್ಯವಹಾರಗಳಿಗೂ ಮಾತೇ ಪ್ರಧಾನ.ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಅದರ ಅರ್ಥಹಾಗೂ ಭಾವನೆ ಒಂದೇ ಆಗಿರುತ್ತದೆ.ಮಾನವನು ಮಾತನಾಡುವ ಮತ್ತು ಆಲೋಚನಾ ಶಕ್ತಿಯಿಂದಲೇ ಇತರೆ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ. ಮಾತಿಲ್ಲದ ಪ್ರಪಂಚವನ್ನು ಊಹಿಸಲೂ ಸಾಧ್ಯವಿಲ್ಲ.ಆಡಿದ ಮಾತು, ಒಡೆದ ಮುತ್ತು ಎಂದೂ ಹಿಂದಿರುಗಿ ಬರುವುದಿಲ್ಲ. ನಾಲಿಗೆ ಎಲ್ಲಾ ಕಡೆ ಹರಿಯ ಬಿಟ್ಟರೆ ’ಬಾಯಿ ಬಿಟ್ಟರೆ ಬಣ್ಣಗೇಡು’ ಎಂಬಂತಾಗುತ್ತದೆ.
ಇಡೀ ಜೀವಜಗತ್ತಿನಲ್ಲಿ ಮಾತನಾಡುವ ಶಕ್ತಿಯಿರುವ ಏಕೈಕ ಪ್ರಾಣಿ ಮಾನವ.ನಮಗೆ ದೇವರು ಕರುಣಿಸಿರುವ ಮಾತೆಂಬ ವರವನ್ನು ಸದ್ಬಳಕೆ ಮಾಡಿಕೊಳ್ಳಬೇಕು.ನಮ್ಮ ಮಾತು ಅನ್ಯರಮನವನ್ನು ಕೆರಳಿಸುವಂತಿರದೆ ಅರಳಿಸುವಂತಿರಲಿ.ನಮ್ಮ ಮಾತು ನಮಗೆ ಶತ್ರುವಾಗದೆ ಮಿತ್ರನಾಗಲಿ ಎಂದುಮಾತೆ ಮುತ್ತು ಮಾತೇ ಮೃತ್ಯುಎಂಬ ಗಾದೆ ಮಾತಿನ ಆಶಯವಾಗಿದೆ