ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ


 
ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳಾದರು ಗಾದೆ ಸುಳ್ಳಾಗದು. ಗಾದೆಯು ಹಿರಿಯರ ಜೀವನದ ಅನುಭವದ ನುಡಿಮುತ್ತುಗಳು.

ಈ ಗಾದೆಯು ಮಾತಿನ ಮಹತ್ವವನ್ನು ಹಾಗೂ ಆಹಾರದ ಇತಿಮಿತಿಗಳನ್ನು ತಿಳಿಸುತ್ತದೆ. ಸಮಯಕ್ಕೆ ಸರಿಯಾಗಿ ಹಿತಮಿತವಾಗಿ ಒಳ್ಳೆಯ ಆಹಾರವನ್ನು ಸೇವಿಸಿದರೆ ನಾವು ಆರೋಗ್ಯವಂತರಾಗಿ ಬದುಕಬಹುದು.ನಮ್ಮ ಆರೋಗ್ಯಕ್ಕೆ ಯಾವುದು ಪಥ್ಯ ಹಾಗೂ ಯಾವುದು ಅಪಥ್ಯ ಎಂದು ತಿಳಿದು ಉಣ್ಣಬೇಕು. ಹೊಟ್ಟೆ ತುಂಬಿದರೆ ಸಾಕೆಂದು  ಸಿಕ್ಕಿದೆಲ್ಲವನ್ನು ಅತಿಯಾಗಿ  ತಿಂದರೆ ಆರೋಗ್ಯ ಹದಗೆಡುತ್ತದೆ. ಆದ್ದರಿಂದ ಅಳಾಗಿ ದುಡಿ ಅರಸನಾಗಿ ಉಣ್ಣು ಎಂದು ಹಿರಿಯರು ಹೇಳುತ್ತಾರೆ.

 ಅದೇ ರೀತಿ ನಾವು ಆಡುವ ಮಾತು ನಯ ವಿನಯದಿಂದ ಕೂಡಿರಬೇಕು. ಯಾವುದೇ ವಿಷಯವಾದರೂ ಅದನ್ನು ಅರಿತು ಮಾತನಾಡಬೇಕು. ನಾವಾಡುವ ಮಾತುಗಳು ಮನೆ-ಮನಸ್ಸನ್ನು ಕಡಿಸಬಹುದು. ಸಂಬಂಧಗಳನ್ನು  ಹಾಳುಗೆಡವಲೂ ಬಹುದು.ಮಾತಿಗೆ ಮಾತು ಬೆಳೆದರೆ ಅದು ಜಗಳಕ್ಕೂ ಕಾರಣವಾಗುತ್ತದೆ. ಆದ್ದರಿಂದ ನಮ್ಮ ಮಾತು ಇನ್ನೊಬ್ಬರಿಗೆ ನೋವು ಕೊಡುವಂತೆ ಇರಬಾರದು.

  ಮಾತೇ ಮುತ್ತು ಮಾತೇ ಮೃತ್ಯು ಎಂದು ಹಿರಿಯರು ಹೇಳಿದ್ದಾರೆ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬ ಮಾತೂ ಇದೆ. ಮಾತನಾಡುವ ಮೊದಲು ಜಾಗ್ರತೆವಹಿಸಬೇಕು. ಒಟ್ಟಿನಲ್ಲಿ ಮಾಡುವ ಊಟ ಹಾಗೂ ಆಡುವ ಮಾತು ಎರಡು ಹಿತಮಿತವಾಗಿದ್ದರೆ ಕ್ಷೇಮ ಎಂಬುದು ಈ ಗಾದೆಯ ತಾತ್ಪರ್ಯವಾಗಿದೆ.

- ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸಿನಲ್ಲಿ ನಮಗೆ ತಿಳಿಸಿರಿ.

             🙏ಧನ್ಯವಾದಗಳು🙏 


Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು