ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಯು ಹಿರಿಯರ ಜೀವನದಅನುಭವದ ಸಾರವಾಗಿದೆ. ಕನ್ನಡದಲ್ಲಿ ಅನೇಕ ಗಾದೆಗಳಿವೆ .ಅದರಲ್ಲಿ ಹಿತ್ತಿಲ ಗಿಡ ಮದ್ದಲ್ಲ ಎಂಬುವುದು ಒಂದು ಪ್ರಸಿದ್ಧವಾದ ಗಾದೆ ಮಾತಾಗಿದೆ.
ನಮ್ಮಮನೆಯ ಹಿತ್ತಿಲಲ್ಲಿ ಅನೇಕ ಔಷಧೀಯ ಸಸ್ಯಗಳು ಬೆಳೆದಿರುತ್ತವೆ. ಅವುಗಳ ಬಗ್ಗೆ ನಮಗೆ ಮಾಹಿತಿಯಾಗಲಿ ವಿಶೇಷವಾದ ಆಸಕ್ತಿಯಾಗಲೀ, ತಿಳಿದುಕೊಳ್ಳುವ ಉತ್ಸಾಹವಾಗಲೀ ಇರುವುದಿಲ್ಲ .ಅವುಗಳೆಲ್ಲ ಕಳೆ ಗಿಡಗಳೆಂಬ ತಾತ್ಸಾರ ಮನೋಭಾವನೆನಮ್ಮಲ್ಲಿ ಇರುತ್ತದೆ.ಅದೇ ಔಷದಿಯ ಸಸ್ಯ ಇನ್ನೊಬ್ಬರ ಹಿತ್ತಿಲಲ್ಲಿ ಬೆಳೆದಿದ್ದು ಅದನ್ನು ಇನ್ನಾರೋ ಒಬ್ಬ ವ್ಯಕ್ತಿ ಔಷಧಕ್ಕಾಗಿ ಬಳಸಿದಾಗ ಅಥವಾ ಪಂಡಿತರೋ, ಹಳ್ಳಿ ವೈದ್ಯರೋ ತಿಳಿಸಿದಾಗ ನಮಗೆ ಅದರ ಮಹತ್ವದ ಅರಿವಾಗುತ್ತದೆ.
ಇದು ನಮ್ಮ ಸುತ್ತಲಿನ ಜನರಿಗೂ ಅನ್ವಯಿಸುತ್ತದೆ. ನಮ್ಮ ಕುಟುಂಬದವರು, ಸ್ನೇಹಿತರು ಅಥವಾ ಹತ್ತಿರದ ವ್ಯಕ್ತಿಗಳಿಗೆ ಹೆಚ್ಚಿನವರು ಅಷ್ಟೊಂದು ಬೆಲೆ ಕೊಡುವುದಿಲ್ಲ.ಅವರ ಸಾಧನೆ, ಪ್ರತಿಭೆ, ಕೌಶಲ್ಯ, ಅವರೊಂದಿಗೆ ಇರುವ ಒಳ್ಳೆಯ ಸಂಬಂಧಗಳನ್ನೂ ಕಡೆಗಣಿಸುತ್ತಾರೆ.ತಮ್ಮ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹುಡುಕುವುದಾಗಲಿ ಅದಕ್ಕೆ ಪ್ರೋತ್ಸಾಹಿಸುವುದಾಗಲಿ ಹೆಚ್ಚಿನ ಹೆತ್ತವರು ಕೂಡ ಮಾಡುವುದಿಲ್ಲ .ಆದರೆ ಬೇರೆಯವರು ಸಾಧನೆ ಮಾಡಿದಾಗ ಹೊಗಳುತ್ತಾರೆ ಹಾಗು ಮೆಚ್ಚಿಕೊಳ್ಳುತ್ತಾರೆ.
ನಮ್ಮ ಸುತ್ತಲಿನ ವ್ಯಕ್ತಿಗಳು ಯಾವುದೇ ಹೊಸ ಸಾಧನೆ ಮಾಡಿದರೂ, ನಾವು ಅದನ್ನು ಅಷ್ಟಾಗಿ ಗಮನಿಸುವುದಿಲ್ಲ. ಆದರೆ, ಅದೇ ಸಾಧನೆಯನ್ನು ವಿದೇಶಿ ವ್ಯಕ್ತಿಯೋ, ಪ್ರಸಿದ್ಧ ವ್ಯಕ್ತಿಯೋ ಮಾಡಿದರೆ, ನಾವು ಅದನ್ನು ಉತ್ಕೃಷ್ಟವೆಂದು ಒಪ್ಪಿಕೊಳ್ಳುತ್ತೇವೆ.
ನಮ್ಮ ಹತ್ತಿರದ ಶಿಕ್ಷಣ ಸಂಸ್ಥೆಗಳನ್ನು ಕಡೆಗಣಿಸಿ ದೂರದ ಅಥವಾ ವಿದೇಶಿ ವಿದ್ಯಾಸಂಸ್ಥೆಗಳನ್ನು ಮೆಚ್ಚಿಕೊಳ್ಳುವ ಪ್ರವೃತ್ತಿಯು ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆಗೆ ಒತ್ತು ನೀಡುತ್ತದೆ.
ನಮ್ಮ ಹಿತ್ತಲಲ್ಲಿಯೇ ಬೆಳೆಯುವ ಔಷಧೀಯ ಗಿಡಗಳನ್ನು ಕಡೆಗಣಿಸಿ ನಾವು ಪಾಶ್ಚಾತ್ಯ ವೈದ್ಯಕೀಯ ಪದ್ಧತಿಯನ್ನು ಅನುಸರಿಸುತ್ತೇವೆ. ಆದರೆ ಈಗ ಪಾಶ್ಚಾತ್ಯ ದೇಶಗಳು ನಮ್ಮ ಆಯುರ್ವೇದ ಪದ್ಧತಿಯನ್ನು , ಧ್ಯಾನ-ಯೋಗವನ್ನು ತಮ್ಮ ದೇಶದಲ್ಲಿ ಖ್ಯಾತಿಗೆ ತರುತ್ತಿವೆ.ಅದೇ ರೀತಿ ನಾವು ಪಾಶ್ಚಿಮಾತ್ಯ ಸಂಸ್ಕೃತಿಗೆ ಮನಸೋತರೆ ಪಾಶ್ಚಿಮಾತ್ಯರು ಭಾರತೀಯ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ.
ಒಟ್ಟಿನಲ್ಲಿ ಈ ಗಾದೆಯ ನಿಜವಾದ ತಾತ್ಪರ್ಯ ಏನಂದರೆ, ನಮ್ಮ ಬಳಿ ಇರುವುದರ ಮಹತ್ವವನ್ನು ನಾವು ಮೊದಲು ಅರಿಯಬೇಕು. ಅದು ಸಂಬಂಧವೋ, ಪ್ರತಿಭೆಯೋ, ಸಂಪತ್ತೋ ಸಂಸ್ಕೃತಿಯೋ ಏನೇ ಆಗಿರಬಹುದು.ನಶಿಸುವ ಮೊದಲು ಪೋಷಿಸಿ ಬೆಳೆಸಬೇಕು ಎಂಬುದು ಈ ಗಾದೆ ಮಾತಿನ ಸಾರಾಂಶವಾಗಿದೆ.