ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ

 ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಯು ಹಿರಿಯರ ಜೀವನದ ಅನುಭವದ ಸಾರವಾಗಿದೆ. ಕನ್ನಡದಲ್ಲಿ ಅನೇಕ ಗಾದೆಗಳಿವೆ .ಅದರಲ್ಲಿ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬುವುದು ಒಂದು ಪ್ರಸಿದ್ಧವಾದ ಗಾದೆ ಮಾತಾಗಿದೆ. 


ದೂರದಿಂದ ನೋಡಿದಾಗ ಯಾವುದೇ ವಸ್ತುವಿನ ಅಥವ ವ್ಯಕ್ತಿಯ ಗುಣದೋಷಗಳು ಅರ್ಥವಾಗುವುದಿಲ್ಲ. ದೂರದಿಂದ ನೋಡಿದರೆ ಒಂದು ಬೆಟ್ಟ ನುಣ್ಣಗೆ , ಸಮತಟ್ಟಾಗಿರುವಂತೆ ಕಾಣುತ್ತದೆ. ದೂರದಿಂದ ಅದನ್ನು ಹತ್ತುವುದು ಕೂಡ ಬಹಳ ಸುಲಭ ಎನ್ನುವ ಭಾವನೆಯನ್ನು ನೀಡುತ್ತದೆ. ನಿಜದ ಅರಿವು ಆಗಬೇಕೆಂದರೆ ಅದರ ಹತ್ತಿರ ಹೋಗಬೇಕು. ಹತ್ತಿರ ಹೋಗಿ ನೋಡಿದಾಗಲೆ ಅದರಲ್ಲಿರುವ ಗುಡ್ಡಗಳು, ಮರಗಿಡಗಳು, ಮುಳ್ಳುಗಳು ಎಲ್ಲ ಕಣ್ಣಿಗೆ ಕಾಣುವುದು  ಕಲ್ಲುಮುಳ್ಳುಗಳಿಂದ ಕೂಡಿದ ದುರ್ಗಮ ರಸ್ತೆ ಕಾಣಸಿಗುತ್ತದೆ. ದೂರದಿಂದ ಅಂದುಕೊಂಡಷ್ಟು ಸುಲಭವಾಗಿ ಅದನ್ನ ಹತ್ತಲು ಸಾಧ್ಯವಿಲ್ಲ ಎನ್ನುವ ಅರಿವಾಗುತ್ತದೆ. ಅಂದರೆ ದೂರದಿಂದ ಬಹಳ ಸುಂದರವಾಗಿ ಮತ್ತು ಸುಲಭವಾಗಿ ಕಂಡ ಬೆಟ್ಟವನ್ನು ಹತ್ತುವುದು ಕಂಡಷ್ಟು ಸುಲಭವಲ್ಲ ಎನ್ನುವುದು ಹತ್ತಿರ ಹೋಗಿ ನೋಡಿದ ಗೊತ್ತಾಗುತ್ತದೆ .

ಹಾಗೇ ಸಮಾಜದಲ್ಲಿರುವ ಜನರನ್ನು ದೂರದಿಂದ ನೋಡುವಾಗ ಅವರು ಸುಖವಾಗಿ ಜೀವನ ಸಾಗಿಸುತ್ತಾರೆಂದು ಕಾಣಿಸುತ್ತದೆ .ಸದಾ ನಮ್ಮ ಕಷ್ಟ ಹಾಗೂ ನೋವುಗಳ ಬಗ್ಗೆ ಕೊರಗುತ್ತಾ ಇರುತ್ತೇವೆ.ಕಷ್ಟಗಳು ಹಾಗೂ ನೋವುಗಳು ಪ್ರತಿಯೊಬ್ಬ ಮನುಷ್ಯನಿಗೂ ಇದ್ದೇ ಇರುತ್ತವೆ.ಆದ್ದರಿಂದ  ದೇವರು ತನಗೇ ಎಲ್ಲ ಕಷ್ಟಗಳನ್ನು ಕೊಟ್ಟಿದ್ದಾನೆ ಎಂದು ಯೋಚಿಸುವುದು ತಪ್ಪು ಎಂದು ಈ ಗಾದೆ ಹೇಳುತ್ತದೆ
ಇದನ್ನು ನಮ್ಮ ಹಿರಿಯರು ಆಡು ಭಾಷೆಯಲ್ಲಿ ‘ದೂರವಿದ್ದರೆ ಪರಿಮಳ, ಹತ್ತಿರ ಬಂದರೆ ವಾಸನೆ’ ಎಂದು ಕೂಡ ಕರೆಯುತ್ತಾರೆ. ಅರ್ಥ ಬಹಳ ಸರಳ. ಯಾವುದು ದೂರದಿಂದ ಸುಂದರವಾಗಿಯೂ, ಎಲ್ಲವೂ ಸರಿಯಾಗಿದೆ ಎನ್ನುವಂತೆ ಕಾಣುತ್ತದೆಯೋ, ಅದು ಹತ್ತಿರದಿಂದ ಬೇರೆಯದೇ ರೀತಿಯ ನೋಟವನ್ನ ಒದಗಿಸುತ್ತದೆ ನಾವು ದೂರದಲ್ಲಿರುವ ಸಂಬಂಧಗಳನ್ನು ಪ್ರೀತಿಯಿಂದ ನೋಡುತ್ತೇವೆ. ದೂರದ ಸ್ನೇಹಿತರು, ಬಂಧುಗಳು ನಮಗೆ ಹಿತಚಿಂತಕರಾಗಿ ಕಾಣಬಹುದು. ಆದರೆ ಅವರೊಂದಿಗೆ ಹೆಚ್ಚು ಕಾಲ ಕಳೆದರೆ ಅವರ ನಿಜವಾದ ಸ್ವಭಾವ, ದೋಷಗಳು, ಅಹಂಕಾರ ಹಾಗೂ ಸ್ವಾರ್ಥದ ನಿಜ ಸ್ವರೂಪ ಸ್ಪಷ್ಟವಾಗುತ್ತದೆ. ಹೀಗಾಗಿ, ದೂರವಿರುವಾಗ ಸೌಹಾರ್ದತೆಯು ಹೆಚ್ಚಿರಬಹುದು, ಆದರೆ ಹತ್ತಿರವಾದಾಗ ಸಣ್ಣ ವಿಚಾರಗಳೇ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು.ಅಂತೆಯೇ ಹೊಸ ಸಂಬಂಧಗಳು ದೂರದಿಂದ ಬಹಳ ಆಕರ್ಷಕವಾಗಿ ತೋರುತ್ತವೆ, ಆದರೆ ಹತ್ತಿರ ಬಂದಾಗ ಅವರ ನಿಜ ಸ್ವರೂಪ ಬೆಳಕಿಗೆ ಬರುತ್ತದೆ ಎನ್ನುವುದು ಗಾದೆ ಮಾತಿನ ಗುಟ್ಟು.

ವಿದೇಶಗಳು ಬಹಳ ಸುಂದರ, ಆಕರ್ಷಕ ಎಂದುಕೊಳ್ಳುವವರೂ ಇದ್ದಾರೆ.ಅದೇ ರೀತಿ ಹಳ್ಳಿಯಲ್ಲಿ ಇರುವವರು ಪಟ್ಟಣವನ್ನು, ಪಟ್ಟಣದಲ್ಲಿ ನೆಲೆಸಿರುವವರು  ಹಳ್ಳಿಯನ್ನುಇಷ್ಟಪಡುತ್ತಾರೆ.ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಒಳ್ಳೆಯ ಕಾಲೇಜುಗಳನ್ನು ಅರಸುತ್ತ ದೂರದ ಊರುಗಳಿಗೆ ಹೋಗುತ್ತಾರೆ .ಆದರೆ ಅಲ್ಲಿ ಬಂದು ನೆಲೆಸಿ ಬದುಕಿದಾಗಲಷ್ಟೇ ಸ್ಥಳೀಯ ಸವಾಲುಗಳ ಅರಿವಾಗುತ್ತದೆ. 

ದೂರದಿಂದ ನೋಡಿದಾಗ ಎಲ್ಲಾ ಸಂಬಂಧಗಳು ,ವಸ್ತುಗಳು , ಸೇವಾ ಸಂಸ್ಥೆಗಳು ,ನಗರ -ಪಟ್ಟಣ ಇತ್ಯಾದಿಗಳು ಸುಂದರವಾಗಿಯೇ ಕಾಣಿಸುತ್ತದೆ.ಆದರೆ ಹತ್ತಿರ ಹೋಗಿ ನೋಡಿದಾಗ ನಿಜವಾದ ತಿಳಿವಳಿಕೆ ಬಂದಾಗ ಮಾತ್ರ, ಎಲ್ಲವೂ ಕಾಣುವ ಹಾಗೆ ಇರುವುದಿಲ್ಲ ಎಂಬ ಸತ್ಯ ಅರಿವಾಗುತ್ತದೆ ಎಂಬುದು ಈ ಗಾದೆ ಮಾತಿನ ಸಾರಾಂಶವಾಗಿದೆ.

.




Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು