ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಜೀವನದ ಅನುಭವದ ನುಡಿಮುತ್ತುಗಳಾಗಿವೆ.
ಜೀವನದಲ್ಲಿ ನಾವು ಇರುವುದರಲ್ಲಿ ನೆಮ್ಮದಿ ಸಂತೃಪ್ತಿಯನ್ನು ಕಾಣಬೇಕು. ಇಲ್ಲದಿರುವುದಕ್ಕಾಗಿ ಕೊರಗಬಾರದು. ಪಡೆಯಲು ಅಸಾಧ್ಯವಾದುದನ್ನು ಹಂಬಲಿಸಬಾರದು. ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು. ಇದರಿಂದ ರಾತ್ರಿಯಿಡೀ ಆರಾಮವಾಗಿ ನೆಮ್ಮದಿಯಿಂದ ಬೆಚ್ಚನೆಯ ನಿದ್ದೆ ಮಾಡಬಹುದು. ತನ್ನ ಕಾಲುಗಳು ಉದ್ದವಾಗಿದೆ ಎಂದು ಹಾಸಿಗೆ ಬಿಟ್ಟು ನೆಲದ ಮೇಲೆ ಕಾಲು ಚಾಚಿದರೆ ಸುಖವಾದ ನಿದ್ದೆ ಸಿಗಲು ಸಾಧ್ಯವಿಲ್ಲ. ನಾವು ಇರು ವುದರಲ್ಲಿ ತೃಪ್ತಿ ಕಂಡುಕೊಳ್ಳಬೇಕು. ಆಗ ಜೀವನದಲ್ಲಿ ಸುಖ-ನೆಮ್ಮದಿಯನ್ನು ಕಾಣಬಹುದು. ಅತಿ ಆಸೆಗೆ ಬಲಿಯಾಗಿ ಅನಗತ್ಯ ಹಣ ಖರ್ಚು ಮಾಡಿ ಎಲ್ಲವನ್ನೂ ಕಳೆದುಕೊಂಡು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕುವ ಬದಲು ಮೊದಲೇ ಯೋಚಿಸಬೇಕು. ಅತಿ ಆಸೆ ಗತಿಗೇಡು ಎಂಬುದನ್ನು ತಿಳಿದಿರಬೇಕು. ನಮ್ಮ ಸಾಮರ್ಥ್ಯವನ್ನು ಅರಿತಿರಬೇಕು. ಅದಕ್ಕನುಗುಣವಾಗಿ ನಾವು ಬದುಕಬೇಕು. ತನ್ನ ಜೀವನವನ್ನು ಇನ್ನೊಬ್ಬರ ಜೀವನದ ಜೊತೆ ಹೋಲಿಕೆ ಮಾಡಿಕೊಳ್ಳಬಾರದು. ಪ್ರತಿಯೊಬ್ಬರ ಆಸೆ ಆಕಾಂಕ್ಷೆಗಳು ಬೇರೆ ಬೇರೆ ರೀತಿಯದ್ದಾಗಿರುತ್ತದೆ. ಒಟ್ಟಿನಲ್ಲಿ ಕಂಡದ್ದೆಲ್ಲಾ ತನಗೆ ಬೇಕು ಎಂಬ ಮನಸ್ಥಿತಿಯನ್ನು ತೊರೆದು ಬದುಕಬೇಕೆಂಬುದು ಈ ಗಾದೆ ಮಾತಿನ ತಾತ್ಪರ್ಯ.
- ಉಷಾ ಪ್ರಸಾದ್
ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸಿನಲ್ಲಿ ನಮಗೆ ತಿಳಿಸಿರಿ.
🙏ಧನ್ಯವಾದಗಳು🙏
Nija
ಪ್ರತ್ಯುತ್ತರಅಳಿಸಿ