ಕೈ ಕೆಸರಾದರೆ ಬಾಯಿ ಮೊಸರು



 ಗಾದೆ ವೇದಕ್ಕೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಇದು ಹಿರಿಯರ ಜೀವನದ ಅನುಭವದ ಸಾರವಾಗಿದೆ.

ಜೀವನದಲ್ಲಿ ಕಷ್ಟಪಟ್ಟರೆ ಮಾತ್ರ ಸುಖವಾಗಿ ಬಾಳ್ವೆ ಮಾಡಲು ಸಾಧ್ಯ ಎಂಬುದನ್ನು ಮೇಲಿನ ಗಾದೆಮಾತು ತಿಳಿಸುತ್ತದೆ. ನಾವು ಇಂದು ಮಾಡುವ ಕೆಲಸದ ಪ್ರತಿಫಲ ಮುಂದೊಂದು ದಿನ ನಮಗೇ ಸಿಗುವುದು.  ಇಂದು ಕಷ್ಟಪಟ್ಟು  ಓದಿದರೆ ನಾಳೆಯ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬಹುದು. ಒಳ್ಳೆಯ ಅಂಕ ಪಡೆದರೆ ಮುಂದೊಂದು ದಿನ ಜೀವನದಲ್ಲಿ ಉತ್ತಮ ಉದ್ಯೋಗವನ್ನು ಹೊಂದಬಹುದು. ನೆಮ್ಮದಿಯಿಂದ ಜೀವನವನ್ನು ಸಾಗಿಸಬಹುದು. 

ಅದೇ ರೀತಿ ರೈತನೊಬ್ಬ ಇಂದು ಕಷ್ಟಪಟ್ಟು  ಹೊಲದಲ್ಲಿ ದುಡಿದರೆ  ಮುಂದೆ ಒಳ್ಳೆಯ ಫಸಲು,ಹಣ  ದೊರೆಯುತ್ತದೆ.  ಆಳಾಗಿ ದುಡಿದು ಅರಸನಾಗಿ ಉಣ್ಣಬಹುದು. 

ಪ್ರತಿಯೊಬ್ಬರು ಬೇರೆ ಬೇರೆ ಕ್ಷೇತ್ರದಲ್ಲಿ ಕೈ ಕೆಸರಾಗುವಂತೆ ಕಷ್ಟಪಟ್ಟು ದುಡಿಯುತ್ತಾರೆ. ಇದರಿಂದ ಸುಖವಾಗಿ ಜೀವನ ಸಾಗಿಸುತ್ತಾರೆ.  ನಾವು ಎಂದೂ ಸೋಮಾರಿಗಳಾಗಿ ಕಾಲ ಕಳೆಯಬಾರದು. ಇಂದು ಕೆಲಸ ಮಾಡದೆ ಆರಾಮವಾಗಿ ಇದ್ದರೆ  ನಾಳೆಯ ದಿನ  ನೋವು , ಕಷ್ಟ, ಯಾತನೆ ಹಾಗೂ ಪಶ್ಚತ್ತಾಪ ಅನುಭವಿಸಬೇಕಾಗುತ್ತದೆ. ಆದ್ದರಿಂದ ನಾವು ಮಾಡುವ ಕೆಲಸ ಎಷ್ಟೇ ಕಷ್ಟ ಇದ್ದರೂ ಅದನ್ನು ಇಷ್ಟ ಪಟ್ಟು ಮಾಡಿದರೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದು ಈ ಗಾದೆ ಮಾತಿನ ತಾತ್ಪರ್ಯ.   ಈ ಮಾತು ಎಲ್ಲಾ ವರ್ಗದ ಜನರಿಗೂ ಅನ್ವಯವಾಗುತ್ತದೆ.

         - ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿರಿ.                                  🙏ಧನ್ಯಧನ್ಯವಾದಗಳು🙏

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

5 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ
ನವೀನ ಹಳೆಯದು