ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು

       

ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಕನ್ನಡದಲ್ಲಿ ಅನೇಕ ಗಾದೆಗಳಿವೆ .ಅದರಲ್ಲಿ "ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು " ಎಂಬುದು ಒಂದು ಪ್ರಸಿದ್ಧವಾದ ಗಾದೆ ಮಾತಾಗಿದೆ.

 ನಮ್ಮ ಹಿರಿಯರು ಜೀವನದಲ್ಲಿ ಅನುಭವಿಸಿದ ತತ್ವಗಳನ್ನು ಗಾದೆಗಳ ಮೂಲಕ ನಮಗೆ ಬೋಧಿಸಿದ್ದಾರೆ. ಅವು ಕೇವಲ ಗಾದೆ ಮಾತುಗಳಷ್ಟೇ ಅಲ್ಲ, ನಾವು ಜೀವನದಲ್ಲಿ ಅನುಸರಿಸಬೇಕಾದ ಅಮೂಲ್ಯ ಪಾಠಗಳಾಗಿವೆ. "ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು" ಎಂಬ ಗಾದೆಯು ನಮ್ಮ ಕರ್ಮಫಲ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಈ ಗಾದೆಯ ಮೂಲ ಅರ್ಥವೇನೆಂದರೆ, ನಾವು ಮಾಡಿದ ಕಾರ್ಯದ ಫಲವನ್ನು ನಾವೇ ಅನುಭವಿಸಬೇಕಾಗುತ್ತದೆ ಎಂದು. ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವ, ವರ್ತನೆ, ಮತ್ತು ನಿರ್ಧಾರಗಳಿಂದ ಉತ್ತಮ ಅಥವಾ ಕೆಟ್ಟ ಫಲಗಳನ್ನು ಪಡೆಯುತ್ತಾನೆ.

ಜೀವನದಲ್ಲಿ ನಾವು ಯಾವ ಕಾರ್ಯ ಮಾಡಿದರೂ, ಅದಕ್ಕೆ ಸರಿಯಾದ ಪ್ರತಿಫಲ ದೊರಕುತ್ತದೆ. ಒಳ್ಳೆಯ ಕೆಲಸ ಮಾಡಿದವರಿಗೆ ಉತ್ತಮ ಫಲ, ಕೆಟ್ಟ ಕೆಲಸ ಮಾಡಿದವರಿಗೆ ಅನಿಷ್ಟ ಫಲ ದೊರೆಯುತ್ತದೆ. ಜೀವನಪೂರ್ತಿ ಕೊರಗುತ್ತಾ ಕಷ್ಟಗಳನ್ನು ಎದುರಿಸುತ್ತಾ ನೋವುಗಳನ್ನುಅನುಭವಿಸುತ್ತಾ ಕಳೆಯಬೇಕಾಗುತ್ತದೆ'ಮಾಡಿದ್ದುಣ್ಣೋ ಮಾರಾಯ 'ಎಂಬಂತೆ ನಮ್ಮ ಕರ್ಮಫಲಗಳನ್ನುಜೀವನದುದ್ದಕ್ಕೂ ನಾವೇ.ಅನುಭವಿಸಬೇಕಾಗುತ್ತದೆ . 

ಉದಾಹರಣೆಗೆ ಹೇಳುವುದಾದರೆ, ಒಬ್ಬ ವಿದ್ಯಾರ್ಥಿ ದಿನವೂ ಕಷ್ಟಪಟ್ಟು  ಓದುತ್ತಾನೆ. ಹೀಗಾಗಿ, ಅವನು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಾನೆ. ಇನ್ನೊಬ್ಬ ವಿದ್ಯಾರ್ಥಿ ಸೋಮಾರಿಯಾಗಿದ್ದು, ಓದದೆ ಕೇವಲ ಮೋಜುಮಸ್ತಿಯಲ್ಲೇ ತೊಡಗುತ್ತಾನೆ .ಅವನು ಪರೀಕ್ಷೆಯಲ್ಲಿ ಫೇಲ್ ಆಗುತ್ತಾನೆ .ಅದೇ ರೀತಿ ಒಬ್ಬ ವ್ಯಕ್ತಿ ಎಲ್ಲರಿಗೂ ಮೋಸ ವಂಚನೆ ಮಾಡುತ್ತಾ ಹಣ ಸಂಪಾದಿಸುತ್ತಾನೆ. ಆದರೆ ಒಂದು ದಿನ ಅವನ ವಂಚನೆ ಬಹಿರಂಗವಾಗುತ್ತದೆ ಮತ್ತು ಸಮಾಜದಲ್ಲಿ ಅವನ ಮಾನ-ಮರ್ಯಾದೆ ಹಾಳಾಗುತ್ತದೆ. ಒಬ್ಬ ರೈತ ಬೆಳೆ ಬೆಳೆಯಲು ಪರಿಶ್ರಮ ಪಡುತ್ತಾನೆ, ಅವನಿಗೆ ಉತ್ತಮ ಫಸಲು ಬರುತ್ತದೆ.ಹೀಗೆ ಇಲ್ಲಿ ಅವರವರು ಮಾಡಿದ ಕರ್ಮದ ಫಲವನ್ನು ಅವರವರೇ ಅನುಭವಿಸುತ್ತಾರೆ ಎಂಬುದನ್ನೇ ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಎಂದು ಗಾದೆ ಮಾತಿನಲ್ಲಿ ನಮ್ಮ ಹಿರಿಯರು ಹೇಳಿದ್ದಾರೆ.

ನಾವು ಮಾಡುತ್ತಿರುವ ಕೆಲಸದ ಪರಿಣಾಮ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು, ಅದರ ಸಕಾರಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಯೋಚಿಸುವುದು ಅತ್ಯವಶ್ಯಕ. ನಾವು ಶ್ರಮವಿಲ್ಲದೆ ಯಶಸ್ಸನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಒಂದು ಬೀಜ ನಾಟಿ ಮಾಡಿದರೆ ಮಾತ್ರ ಅದು ಗಿಡವಾಗಿ ಬೆಳೆದು ದೊಡ್ಡ ಮರವಾಗುತ್ತದೆ.

"ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು" ಎಂಬ ಗಾದೆಯು ನಾವು ಮಾಡಿದ ಕರ್ಮದ ಪ್ರಕಾರ ಫಲ  ಲಭಿಸುತ್ತದೆ ಎಂದು ತಿಳಿಸುತ್ತದೆ. ನಾವು ಕೆಟ್ಟ ಕೆಲಸ ಮಾಡಿದರೆ, ಅದರಿಂದ ಕಷ್ಟ ಎದುರಿಸಬೇಕು. ಒಳ್ಳೆಯ ಕೆಲಸ ಮಾಡಿದರೆ, ಅದರಿಂದ ಸಮಾಧಾನ, ಶ್ರೇಯಸ್ಸು, ಮತ್ತು ಸಂತೋಷ ಸಿಗುತ್ತದೆ.  ಆದ್ದರಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಅದರ ಪರಿಣಾಮಗಳ ಬಗ್ಗೆ ಯೋಚಿಸಬೇಕು ಎಂಬುದು ಇದರ ಸಾರಾಂಶವಾಗಿದೆ

 - ಉಷಾ ಪ್ರಸಾದ್


Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು