ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ

 


ಗಾದೆಯು ವೇದಕ್ಕೆ ಸಮಾನ.ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಯು ಜನಪದರ ಹಿರಿಯರ ಜೀವನದ ಅನುಭವದ ನುಡಿಮುತ್ತುಗಳು.

ಉಪ್ಪು ಅಡಿಗೆಯಲ್ಲಿ ಪ್ರಧಾನವಾಗಿ ಬಳಸಲ್ಪಡುವ ವಸ್ತು. ಉಪ್ಪು ಇಲ್ಲದೆ ಮಾಡಿದ ಅಡಿಗೆಯು ಬಾಯಿಗೆ ರುಚಿಸದು. ಮಾಡುವ ಅಡುಗೆಗೆ ಬೇರೆ ಬೇರೆ ಸಾಂಬಾರ ಪದಾರ್ಥಗಳನ್ನು ಅಥವಾ ವಸ್ತುಗಳನ್ನು ಹಾಕುತ್ತೇವೆ. ಆದರೆ ಉಪ್ಪಿನ ರುಚಿಯೇ ಇಲ್ಲದಿದ್ದರೆ ಮಾಡಿದ ಅಡುಗೆಯು ವ್ಯರ್ಥವಾಗುವುದು. ಅದೇ ರೀತಿ ತಾಯಿಯೂ ಕೂಡ ನಮ್ಮ ಬದುಕಿನಲ್ಲಿ ಪ್ರಧಾನವಾಗಿ ಇರಬೇಕಾದವಳು. ತಾಯಿ ಇಲ್ಲದ ದಿದ್ದರೆ ಜೀವನವೇ ಕತ್ತಲಾಗುವುದು. ತಾಯಿಯು ನಮ್ಮನ್ನು ಕತ್ತಲಿನಿಂದ ಬೆಳಕಿನೆಡೆಗೆ ನಡೆಸುವ ಗುರುವಾಗಿದ್ದಾಳೆ. ಮನೆಯಲ್ಲಿ ಅಜ್ಜ, ಅಜ್ಜಿ, ಅಪ್ಪ, ಅಣ್ಣ, ಅಕ್ಕ, ತಂಗಿ, ತಮ್ಮ, ಮಾವ, ಅತ್ತೆ ಹೀಗೆ ನಾನಾ ರೀತಿಯ ಬಂಧುಗಳಿದ್ದರೂ ತಾಯಿಗಿಂತ ಮಿಗಿಲಾದ ಬಂಧು ಬೇರೊಬ್ಬರಿಲ್ಲ. ತಾಯಿಯೇ ಕಣ್ಣಿಗೆ ಕಾಣುವ ದೇವರು.ತಾಯಿಯಿಂದ ಸಿಗುವ ನಿಷ್ಕಲ್ಮಷವಾದ ಪ್ರೀತಿ ವಾತ್ಸಲ್ಯವನ್ನು ಜಗತ್ತಿನಲ್ಲಿ ಬೇರೆ ಯಾರಿಂದಲೂ ಬಯಸುವಂತಿಲ್ಲ. ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಧೈರ್ಯ ತುಂಬಿ ಕೈಹಿಡಿದು ಮುನ್ನಡೆಸುವವಳು ತಾಯಿ. ಅಡುಗೆಮನೆಯಲ್ಲಿ ಉಪ್ಪಿನ ಅಗತ್ಯ ಎಷ್ಟಿದೆಯೋ ಅದರಿಂದಲೂ ಜಾಸ್ತಿ ನಮ್ಮ ಜೀವನದಲ್ಲಿ ತಾಯಿಯ ಅಗತ್ಯವಿದೆ. ಈ ಕಾರಣದಿಂದಲೇ ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂಬ ಗಾದೆ ಮಾತು ಹುಟ್ಟಿಕೊಂಡಿತು.

- ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸಿನಲ್ಲಿ ನಮಗೆ ತಿಳಿಸಿರಿ.

             🙏ಧನ್ಯವಾದಗಳು🙏

 




2 ಕಾಮೆಂಟ್‌ಗಳು: