ಸ್ವಾಮಿ ವಿವೇಕಾನಂದರು


 ಪೀಠಿಕೆ
:ಚಿಕ್ಕವಯಸ್ಸಿನಲ್ಲಿಯೇ ವಿಶ್ವವಿಖ್ಯಾತಿಯನ್ನು ಪಡೆದು ಗಣನೀಯವಾದ ಸಾಧನೆಯನ್ನು ಮಾಡಿ ದೇಶಕ್ಕೋಸ್ಕರ ಶ್ರಮಿಸಿ, ಸಂಸ್ಕೃತಿಯ ಆರಾಧಕರಾಗಿ ವಿಶ್ವದೆಲ್ಲೆಡೆ ವಿಶ್ವಮಾನವ ಸಂದೇಶವನ್ನು ಸಾರಿ, ಭಾರತೀಯ ಸಂಸ್ಕೃತಿ ,ನಾಗರೀಕತೆ ಹಾಗೂ ಹಿಂದೂ ಧರ್ಮವನ್ನು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪರಿಚಯಿಸಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದವರು  ಸ್ವಾಮಿ ವಿವೇಕಾನಂದರು.

ವಿಷಯ ವಿವರಣೆ: ಕ್ರಿ.ಶ 1863 ರ ಜನವರಿ 12ರಂದು ವಿಶ್ವನಾಥದತ್ತ ಹಾಗು ಭುವನೇಶ್ವರಿ ದೇವಿಯವರ ಮಗನಾಗಿ ವಿವೇಕಾನಂದರು ಜನಿಸಿದರು. ತುಂಟ ಬಾಲಕನಿಗೆ ನರೇಂದ್ರ ಎಂದು ನಾಮಕರಣ ಮಾಡಿದರು. ಚಿಕ್ಕವಯಸ್ಸಿನಲ್ಲಿಯೇ ರಾಮಾಯಣ ಮತ್ತು ಮಹಾಭಾರತವನ್ನು  ತಾಯಿಯಿಂದ ಕಲಿತುಕೊಂಡರು. ಕರುಣೆ, ಸತ್ಯ, ಧರ್ಮ, ಪ್ರೇಮ, ಸರಳತೆ, ಗಾಂಭೀರ್ಯತೆ, ಧೈರ್ಯ ಮತ್ತು ದಯೆಗಳ ಸಾಕಾರ ಮೂರ್ತಿಯಾಗಿದ್ದರು. ಭಾರತದ ಹಾಗೂ ಇಲ್ಲಿನ ದೀನ ದಲಿತರ ಉದ್ಧಾರ ಮತ್ತು ಏಳ್ಗೆಯ ಕುರಿತು ಚಿಂತನೆ ಮಾಡತೊಡಗಿದರು. ಲೋಕದ ಉದ್ಧಾರವೇ ನನ್ನ ಉದ್ಧಾರ ಎಂದು ತಿಳಿದರು. ರಾಮಕೃಷ್ಣ ಪರಮಹಂಸರನ್ನು ಗುರುಗಳಾಗಿ ಸ್ವೀಕಾರ ಮಾಡಿದರು. ಅವರ ಮಾರ್ಗದರ್ಶನದಲ್ಲಿ ನಡೆದರು.  ಕಷ್ಟವನ್ನು,ಮೂರ್ಖರನ್ನು, ಸಾವನ್ನು, ಸೋಲನ್ನು ಎದುರಿಸಬೇಕು ಆಗ ಮಾತ್ರ ಅವುಗಳು ನಮ್ಮನ್ನು ಬಿಟ್ಟು ಓಡಿ ಹೋಗುವುದು ಎಂದು ನೊಂದ ಜನರಿಗೆ ವಿವೇಕಾನಂದರು ಧೈರ್ಯ ತುಂಬುತ್ತಿದ್ದರು.

ಕ್ರಿ.ಶ 1893 ರಲ್ಲಿ ಚಿಕಾಗೋ ನಗರದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ 'ನನ್ನ ಪ್ರೀತಿಯ ಅಣ್ಣ ತಮ್ಮಂದಿರೆ, ಅಕ್ಕ-ತಂಗಿಯರೇ' ಎಂದು ಸಂಬೋಧಿಸಿ ಸಹೋದರತ್ವದ ಭಾವನೆಯನ್ನು ಜಗತ್ತಿಗೆ ಬೋಧಿಸಿದರು. ರಾಮಕೃಷ್ಣರ ತತ್ವ-ಸಿದ್ಧಾಂತ, ದೇಶಭಕ್ತಿಯನ್ನು ಸಾರಲು ಮತ್ತು ಸಮಾಜ ಸೇವೆಗಳನ್ನು ಕೈಗೊಳ್ಳಲು ದೇಶದಾದ್ಯಂತ ರಾಮಕೃಷ್ಣ ಮಿಷನ್ ಗಳನ್ನು ತೆರೆದರು. ಅನ್ನದಾನ, ವಿದ್ಯಾದಾನ, ಆಧ್ಯಾತ್ಮದ ಪ್ರಚಾರ ಕಾರ್ಯಗಳನ್ನು  ಇಲ್ಲಿ ಆರಂಭಿಸಿದರು. ಶಿಕ್ಷಣವೆಂದರೆ ಕೇವಲ ಜ್ಞಾನವಲ್ಲ, ಜೀವನವನ್ನು ಪರಿ ಪೂರ್ಣಗಳಿಸುವ ಸಾಧನವೆಂದು ತಿಳಿಸಿದರು. ವಿದ್ಯಾರ್ಥಿಗಳಲ್ಲಿ ಧೈರ್ಯ, ಸಾಹಸ, ಆತ್ಮಪ್ರಜ್ಞೆ ಬಳಸುವಂತಹ ಶಿಕ್ಷಣದ ಅಗತ್ಯವಿದೆ ಎಂದು ಎಚ್ಚರಿಸಿದರು. 'ಏಳಿರಿ ,ಎದ್ದೇಳಿರಿ ,ಜಾಗೃತರಾಗಿರಿ ,ಧೈರ್ಯದಿಂದ ತಲೆಯೆತ್ತಿ ಆತ್ಮಸಮ್ಮಾನ ದಿಂದ ಬದುಕಿರಿ, ಎಲ್ಲರನ್ನು ಪ್ರೀತಿಯಿಂದ ಕಾಣಿರಿ' ಎಂದು ಸಾರಿಸಾರಿ ತಿಳಿಸಿದರು. ಸ್ವಾಮಿ ವಿವೇಕಾನಂದರು ಭಾರತದ ಆಶಾ ಜ್ಯೋತಿಯಾಗಿ, ಯುವ ಪ್ರವರ್ತಕರಾಗಿ, ಶಕ್ತಿಯಾಗಿ, ವಿಶ್ವಮಾನವರಾಗಿ, ದಿವ್ಯಚೇತನ ಮೂರ್ತಿಯಾಗಿ ಬಾಳಿ ಬೆಳಗಿದರು. 1902 ಜುಲೈ 4ರಂದು ಇಹಲೋಕದ ಯಾತ್ರೆಯನ್ನು ಮುಗಿಸಿ ಅಜರಾಮರರಾದರು.

ಉಪಸಂಹಾರ: ಸ್ವಾಮಿ ವಿವೇಕಾನಂದರ ಜೀವನ ತತ್ವಗಳು, ಆದರ್ಶಗಳು, ಸಿದ್ಧಾಂತಗಳು, ವಿಚಾರಗಳು ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಹಾಗೂ ಅನುಕರಣೀಯವಾಗಿದೆ. ಅವರು ತಿಳಿಸಿದ ಮಾರ್ಗದಲ್ಲಿ ಬದುಕುವುದು ವಿವೇಕಾನಂದರಿಗೆ ತೋರಿಸುವ ಗೌರವವಾಗಿದೆ.


-ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಮೆಂಟಿನ ಮೂಲಕ ತಿಳಿಸಿರಿ.

    

   🙏ಧನ್ಯವಾದಗಳು 🙏


Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು