ಮನಸ್ಸಿದ್ದರೆ ಮಾರ್ಗ

 


ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಇದು ಹಿರಿಯರ ಅನುಭವದ ನುಡಿಮುತ್ತುಗಳು .

ಮನಸ್ಸಿದ್ದರೆ ಮಾರ್ಗ ಎಂಬುದು ಪ್ರೇರಣಾತ್ಮಕವಾದ ಹಾಗು ಸಕಾರಾತ್ಮಕವಾದ ಗಾದೆ ಮಾತಾಗಿದೆ. ಪ್ರತಿಯೊಬ್ಬರ ಮನಸ್ಸು ಚಂಚಲವಾಗಿರುತ್ತದೆ. ಏಕಾಗ್ರತೆ ಇದ್ದರೆ ಮಾತ್ರ ಹಿಡಿದ ಕೆಲಸವನ್ನು ಮುಗಿಸಬಹುದು. ಮನಸ್ಸಿನಲ್ಲಿ ಒಂದು ಉದ್ದೇಶವಿರಬೇಕು. ಸಂಕಲ್ಪ, ಆಸಕ್ತಿ ಹಾಗೂ ದೃಢತೆ ಇದ್ದಾಗ ಸಾಗಬೇಕಾದ ಮಾರ್ಗ ಕಾಣಿಸುತ್ತದೆ. 

ನಾವು ಯಾವುದೇ ಒಂದು ಕೆಲಸವನ್ನು ಮಾಡಲು ನಮ್ಮಲ್ಲಿ ಆಸಕ್ತಿ ಇರಬೇಕು ." ಆಗದು ಎ೦ದು ಕೈಕಟ್ಟಿ ಕೂತರೆ ಸಾಗದು ಕೆಲಸವು ಮುಂದೆ " ಎಂಬ ಗೀತೆಯೊಂದರ ಸಾಲಿನಂತೆ ನನ್ನಿಂದ ಅಸಾಧ್ಯವೆಂದುಕೊಂಡರೆ ಸುಲಭದ ಕೆಲಸವೂ ಕಷ್ಟವೆಂದು ಅನಿಸುತ್ತದೆ. ಎಷ್ಟು ಕಷ್ಟದ ಕೆಲಸ ವಾದರೂ ಮಾಡುತ್ತೇನೆ ಎಂಬ ಮನಸ್ಸಿದ್ದರೆ ಅದನ್ನು ಸುಲಭದಲ್ಲಿ ಮಾಡಿ ಮುಗಿಸಬಹುದು. ವಿದ್ಯಾರ್ಥಿಗಳಿಗೆ ಓದಲು ಬರೆಯಲು ಕಲಿಯಲು ಮನಸ್ಸಿದ್ದರೆ ಯಾವ ಪ್ರಶ್ನೆ ಪತ್ರಿಕೆಯೂ ಕಷ್ಟ ಅನಿಸಲಾರದು.ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆಯಬೇಕಾದರೆ ಆ ವಿದ್ಯಾರ್ಥಿಗೆ ಒಳ್ಳೆಯ ಅಂಕ ಸಿಗಬೇಕೆಂಬ ಕನಸಿರಬೇಕು. ಕಂಡ ಕನಸನ್ನು ನನಸಾಗಿಸುವ ಮನಸ್ಸು ಬೇಕು. ಆಗ ಅವನಿಗೆ ಮಾರ್ಗವೊಂದು ಕಾಣಿಸುತ್ತದೆ. ಓದುವ ಆಸಕ್ತಿ ಹೆಚ್ಚಿಸಿಕೊಂಡು , ಒಳ್ಳೆಯ ಅಂಕ ಪಡೆಯುತ್ತೇನೆ ಎಂಬ ಸಂಕಲ್ಪದೊಂದಿಗೆ , ಭವಿಷ್ಯದಲ್ಲಿ ಒಳ್ಳೆಯ ಉದ್ಯೋಗ ಹೊಂದಬೇಕೆಂಬ ಉದ್ದೇಶದಿಂದ ದೃಢಚಿತ್ತದಿಂದ ಪರೀಕ್ಷೆಯನ್ನು ಎದುರಿಸುತ್ತಾನೆ. ಒಳ್ಳೆಯ ಅಂಕ ಪಡೆದು ಕನಸು ನನಸಾಗಿಸಿ ಗುರಿಯನ್ನು ತಲುಪುತ್ತಾನೆ. ಆದರೆ ಮನಸ್ಸಿಲ್ಲದೇ ಹೋದರೆ ಸುಲಭ ಪ್ರಶ್ನೆಯು ಕಬ್ಬಿಣದ ಕಡಲೆಯಾಗಬಹುದು. ಹೀಗೆ ಮಾಡುವ ಪ್ರತಿಯೊಂದು ಕೆಲಸಕ್ಕೂ ಮನಸ್ಸೆಂಬುದು ಅತ್ಯಗತ್ಯ.

 ನಮ್ಮ ಒಳ್ಳೆಯ ಹಾಗು ಕೆಟ್ಟ ಕೆಲಸಗಳಿಗೆ ಮನಸ್ಸೇ ಕಾರಣ. ಮಸಸ್ತಿದ್ದರೆ ಮಾರ್ಗ ಎ೦ದು ತಿಳಿದು ಸೋಮಾರಿತನವನ್ನು ಬಿಟ್ಟು ಕೆಲಸ ಮಾಡಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ.

ತನ್ನ ಕೈಯಲ್ಲಿ ಆಗಲ್ಲ ಎಂದು ಸುಮ್ಮನೆ ಇದ್ದರೆ ಏನನ್ನು ಸಾಧಿಸಲು ಅಸಾಧ್ಯ. ನಾನು ಮನಸ್ಸು ಮಾಡಿದರೆ ಇದನ್ನು ಮಾಡಬಲ್ಲೆ ಎಂಬ ದೃಢ ನಿರ್ಧಾರ ಇದ್ದಾಗ ಯಶಸ್ಸಿನ ಗುರಿ ತಲುಪಬಹುದು ಎಂಬುದು ಈ ಗಾದೆ ಮಾತಿನ ತಾತ್ಪರ್ಯವಾಗಿದೆ.

-ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಮೆಂಟಿನ ಮೂಲಕ ತಿಳಿಸಿರಿ.

  

     🙏ಧನ್ಯವಾದಗಳು 🙏

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು