ಇಂದಿನ ಮಕ್ಕಳೇ ಮುಂದಿನ ಜನಾಂಗ

 


ಉರುಳುವ ಕಾಲಚಕ್ರದಲ್ಲಿ ನಾವೆಲ್ಲರೂ ಪಾತ್ರದಾರಿಗಳು. ಜೀವನದ ಚಕ್ರದಲ್ಲಿ ಹುಟ್ಟು, ಬಾಲ್ಯ, ಯೌವನ,  ವೃದ್ಧಾಪ್ಯ ಹಾಗು ಸಾವು ಎಂಬಂದು ಪ್ರತಿಯೊಂದು ಜೀವಿಗೂ ಇದೆ. ಜೀವನ ಎಂಬುದು ಕ್ಷಣಿಕ. ತಲೆಮಾರುಗಳು ಬದಲಾಗುತ್ತಾ ಹೋಗುತ್ತದೆ. ಇಂದಿನ ಮಕ್ಕಳು ಬೆಳೆದು ದೊಡ್ಡವರಾಗಿ ಮುಂದಿನ ಪ್ರಜೆಗಳಾಗುತ್ತಾರೆ.

ನಮ್ಮ ಮುಂದಿನ ಜನಾಂಗ ಶಾಂತಿ, ನೆಮ್ಮದಿ, ಸಂತೊಷದಿಂದ ಜೀವನ ಸಾಗಿಸಬೇಕಾದರೆ ಹೆತ್ತವರಾದ ನಾವು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಸರಿ ತಪ್ಪುಗಳ ಬಗ್ಗೆ ತಿಳುವಳಿಕೆ ಕೊಡಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗದು ಎಂಬುದನ್ನು ಹಿರಿಯರು ಮನಗಂಡು ತಮ್ಮ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ, ಸಮಾಜಮುಖಿಯಾಗಿ ಬೆಳೆಸಬೇಕು. ನಮ್ಮ ಸಂಪ್ರದಾಯ, ಸಂಸ್ಕೃತಿ ,ಆಚಾರ- ವಿಚಾರಗಳನ್ನು ಕಲಿಸಬೇಕು. ಮಕ್ಕಳು ದೇಶದ ಬಗ್ಗೆ ಪ್ರೀತಿ, ಗುರು ಹಿರಿಯರು ಹಾಗು ಹೆತ್ತವರ ಮೇಲೆ ಗೌರವ, ಕಿರಿಯರಲ್ಲಿ ಕಾಳಜಿ , ಧಮ೯ ಹಾಗು ದೇವರಲ್ಲಿ ನಂಬಿಕೆಯನ್ನು ಹೊಂದಬೇಕು. ತಪ್ಪು ದಾರಿ ತುಳಿಯದಂತೆ ಜಾಗ್ರತೆ ವಹಿಸುವುದು ಹೆತ್ತವರ ಕರ್ತವ್ಯ. ಹೆತ್ತವರು ಮಕ್ಕಳಿಗಾಗಿ ಆಸ್ತಿ ಮಾಡದಿದ್ದರೂ ಚಿಂತೆಯಿಲ್ಲ, ಆದರೆ ಮಕ್ಕಳನ್ನೇ ಆಸ್ತಿಯಾಗಿ ಮಾಡಬೇಕು. ಬದುಕುವ ರೀತಿಯನ್ನು ಮಕ್ಕಳಿಗೆ ಕಲಿಸಬೇಕು. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಧರ್ಮ ಮಕ್ಕಳ ಮನಸ್ಸಲ್ಲಿ ಮಾಡಬೇಕು.

ಮುಂದಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ,  ದೇಶದಲ್ಲಿ ಶಾಂತಿ ನೆಮ್ಮದಿಯ ಜೀವನವನ್ನು ನಮ್ಮ ಮಕ್ಕಳು ನಡೆಸಬೇಕಾದರೆ ಹಿರಿಯರಾದ ನಮ್ಮೆಲ್ಲರ ಜವಾಬ್ದಾರಿ ಇದೆ. ಮಕ್ಕಳನ್ನು ಬೆಳೆಸುವ ರೀತಿಯ ಮೇಲೆ ಮುಂದಿನ ಭವಿಷ್ಯ ನಿರ್ಧಾರ ಆಗುತ್ತದೆ.


Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು