ಪರಿಸರ ಸಂರಕ್ಷಣೆ



ಟಿಪ್ಟಣಿ :

 ಪರಿಸರ ಸಂರಕ್ಷಣೆಯೇ ನಮ್ಮಪ್ರಾಥಮಿಕ ಕಾಳಜಿಯಾಗಬೇಕು. ಪರಿಸರವು ಜೀವಸಂಕುಲದ ಉಳಿವಿಗೆ ಕಾರಣಿಭೂತವಾಗಿದೆ. ಇದು ಭೂಮಿಯ ಅಸ್ತಿತ್ವಕ್ಕೆ ಆಧಾರವಾಗಿದೆ. ನಮ್ಮ ಪರಿಸರವು ಅರಣ್ಯನಾಶ, ಜಾಗತಿಕವಾಗಿ ಏರಿದ ತಾಪಮಾನ ಹಾಗು ಬೇರೆ ಬೇರೆ ರೀತಿಯ ಮಾಲಿನ್ಯಗಳಿಂದ ಹಾಳಾಗುತ್ತಿದೆ. ಮಾನವರಿಗೆ ಮಾತ್ರವಲ್ಲದೇ ಇಡೀ ಜೀವರಾಶಿಗೆ ಆರೋಗ್ಯಕರವಾಗಿ ಜೀವನ ನಡೆಸಲು ಸ್ವಚ್ಛ ಪರಿಸರದ ಅಗತ್ಯವಿದೆ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯವಾಗಿದೆ

ವಿಷಯ ವಿವರಣೆ: 

ಇಂದು ನಾವು ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿಯನ್ನು ಸಾಧಿಸಿದ್ದೇವೆ.ಹೊಸ ಹೊಸ ತಂತ್ರಜ್ಞಾನಗಳ ಮೂಲಕ ಅಭಿವೃದ್ಧಿಯ ಪಥದಲ್ಲಿ ಮುಂದುವರಿದಿದ್ದೇವೆ.ಆದರೆ ಈ ತಂತ್ರಜ್ಞಾನಗಳೇ ನಮ್ಮ ಪರಿಸರದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿದೆ.ಜನರು ಭೂಮಿಯ ಮತ್ತು ಜೀವರಾಶಿಯ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಯೋಚಿಸದೆ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿದ್ದಾರೆ.ಪರಿಸರದಿಂದಲೇ ನಾವು ನೀರು ,ಗಾಳಿ ಭೂಮಿಯಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಅವುಗಳ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಆದರೆ ಇಂದು ನಾವು ಬಳಸಿಕೊಳ್ಳುವಂತಹ ಎಲ್ಲಾ ನೈಸರ್ಗಿಕ ಸಂಪನ್ಮೂಲಗಳು ಮಾಲಿನ್ಯಕ್ಕೆ ಒಳಗಾಗಿದೆ. ನಮ್ಮ ಸ್ವಾರ್ಥಕ್ಕೆ ಪರಿಸರ ನಾಶವಾಗುತ್ತಿದೆ .ವಾಯುಮಾಲಿನ್ಯ ಜಲ ಮಾಲಿನ್ಯ , ಶಬ್ದಮಾಲಿನ್ಯ , ಮಣ್ಣಿನ ಸವಕಳಿ ,ಅರಣ್ಯ ನಾಶ ಉಂಟಾಗುತ್ತಿದೆ.ಪರಿಸರ ನಾಶದಿಂದ ಮಾನವನು ಸೇರಿದಂತೆ ಇಡೀ ಜೀವ ಸಂಕುಲ ವಿನಾಶದಡೆಗೆ ಸಾಗುತ್ತಿದೆ . ನಾವು ಕುಡಿಯುವ ನೀರು ಉಸಿರಾಡುವ ಗಾಳಿ ತಿನ್ನುವ ಆಹಾರಗಳುವಿಷಮಯವಾಗಿದೆ .ಇದರಿಂದಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ .ನದಿ ಸಮುದ್ರಗಳಿಗೆ ಕಾರ್ಖಾನೆಗಳ ನೀರು ಸೇರಿಕೊಂಡು ವಿಷಮಯವಾಗಿ ಜಲಜಂತುಗಳು ಸಾಯುತ್ತಿದೆ .ಅರಣ್ಯ ನಾಶದಿಂದ ಕಾಡುಪ್ರಾಣಿಗಳ ವಾಸ ಸ್ಥಳ ನಾಶವಾಗಿ ಆಹಾರಕ್ಕಾಗಿ ನಾಡನ್ನು ಅರಸಿ ಬರುತ್ತಿದೆ. ನಮ್ಮ ಸ್ವಾರ್ಥಕ್ಕಾಗಿ ಕಾಡನ್ನು ಕಡಿದು ಮರ ಗಿಡಗಳನ್ನು ನಾಶ ಮಾಡುತ್ತಿದ್ದೇವೆ. ಇದರಿಂದ ಕಾಲಕಾಲಕ್ಕೆ ಮಳೆ ಸರಿಯಾಗಿ ಆಗುತ್ತಿಲ್ಲ. ಅತಿವೃಷ್ಟಿ ಅಥವಾ ಅನಾವೃಷ್ಟಿ ಪ್ರತಿವರ್ಷವೂ ಕಂಡು ಬರುತ್ತದೆ .ಇದರಿಂದ ರೈತರು ಬೆಳೆಯುವ ಬೆಳೆಗಳು ನಾಶವಾಗಿ ಅಪಾರ ಕಷ್ಟ ನಷ್ಟ ಅನುಭವಿಸಬೇಕಾಗುತ್ತದೆ. ಪ್ಲಾಸ್ಟಿಕ್ ಮತ್ತು ಗಾಜಿನ ಬಾಟಲಿಗಳು, ಟಿನ್ ಕ್ಯಾನ್‌ಗಳು, ಒಡೆದ ಕಂಪ್ಯೂಟರ್‌ಗಳು ಅಥವಾ ಇತರ ಪ್ಲಾಸ್ಟಿಕ್ ವಸ್ತುಗಳು, ಬಟ್ಟೆಗಳು ಹಾಗೂ ಇನ್ನು ಮುಂದೆ ಬಳಕೆಯಲ್ಲಿಲ್ಲದ ಬಹಳಷ್ಟು ತ್ಯಾಜ್ಯ ವಸ್ತುಗಳು  ಮಣ್ಣನ್ನು ತಲುಪಿದರೆ ಅದು ವರ್ಷಗಳ ಕಾಲ ಅಲ್ಲಿಯೇ ಇದ್ದು ಪರಿಸರವನ್ನು ಕಲುಷಿತಗೊಳಿಸುತ್ತದೆ. ಆದ್ದರಿಂದ ನಾವು ತ್ಯಾಜ್ಯವನ್ನು ಪ್ರಕೃತಿಗೆ ಎಸೆಯುವ ಬದಲು ಮರುಬಳಕೆ ಮಾಡಬೇಕು. ವನ ಮಹೋತ್ಸವ, ಗಿಡ ನೆಡುವಂಥ ಕಾರ್ಯಕ್ರಮಗಳಿಗೆ ಅನುಕೂಲ ಮಾಡಿಕೊಡಬೇಕು.

ವಿಶೇಷವಾಗಿ ಮೆಟ್ರೋ ನಗರಗಳಲ್ಲಿ ವಿದ್ಯುತ್ ಸ್ಥಾವರಗಳು, ಮತ್ತು ವಾಹನಗಳ ಸಂಖ್ಯೆ ಕಡಿಮೆಯಾಗಬೇಕು. ಇದರಿಂದ ವಾಯು ಮಾಲಿನ್ಯ ಕಡಿಮೆಯಾಗಲಿದೆ.

    ಉಪಸಂಹಾರ:   ನಾವು ಪರಿಸರವನ್ನು ಉಳಿಸುವ ದೊಡ್ಡ ಕೆಲಸವನ್ನು ಮಾಡಲೇ ಬೇಕು.ಪರಿಸರವನ್ನು ಸಂರಕ್ಷಿಸುವುದು ಬಹಳ ಮುಖ್ಯ. ನಾವು ಪರಿಸರ ನಾಶದ ಅಂಚಿನಲ್ಲಿ ನಿಂತಿದ್ದೇವೆ ಎಂದು ಎಲ್ಲರಿಗೂ ಅರಿವು ಮೂಡಿಸುವ ಕಾರ್ಯವಾಗಬೇಕು. ಸ್ವಚ್ಛ ಪರಿಸರದ ನಿರ್ಮಾಣ ಮಾಡಬೇಕು.


Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು